Back to Top

ಕೆಟ್ಟ ಗಳಿಗೆಯನ್ನು ದಾಟಿ ಬಂದು 'ಗುಡ್‌ ನ್ಯೂಸ್' ಕೊಟ್ಟ ಮಡೆನೂರು ಮನು!

SSTV Profile Logo SStv August 23, 2025
ಮನು ಸೆಪ್ಟೆಂಬರ್ 10ರಂದು ಹೊಸ ಚಿತ್ರ ಘೋಷಣೆ
ಮನು ಸೆಪ್ಟೆಂಬರ್ 10ರಂದು ಹೊಸ ಚಿತ್ರ ಘೋಷಣೆ

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದರು. ತಮ್ಮ ಮೊದಲನೇ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೋ’ ಬಿಡುಗಡೆಯಾಗಬೇಕಾದ ಕ್ಷಣದಲ್ಲೇ, ಸಹನಟಿಯ ಮೇಲೆ ಅತ್ಯಾಚಾರ ಆರೋಪ ಎದುರಿಸಿ ಜೈಲುಪಾಲಾಗಿದ್ದರು. ಪ್ರಕರಣ ಗಂಭೀರ ತಿರುವು ತಾಳಿದ್ದರೂ, ಇದೀಗ ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಸಂಪೂರ್ಣವಾಗಿ ಪ್ರಕರಣದಿಂದ ಹೊರಬಂದಿದ್ದಾರೆ.

ಈ ನಡುವೆ ಮನು ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 10) ಹೊಸ ಚಿತ್ರದ ಟೈಟಲ್ ಅನಾವರಣ ಮಾಡಲು ತಯಾರಾಗಿದ್ದಾರೆ. ಈ ಸಿನಿಮಾ ಜೆಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ನಟರಾಜ್ ಎಂ ಅವರು ಇದರ ನಿರ್ಮಾಪಕರು.

ಮನು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:
"ಎಲ್ಲರಿಗೂ ನಮಸ್ಕಾರ. ಕೆಟ್ಟ ಗಳಿಗೆಯನ್ನು ದಾಟಿ ನಿಮ್ಮ ಆಶೀರ್ವಾದದೊಂದಿಗೆ ಬಂದಿದ್ದೇನೆ. ನನ್ನ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ನೀಡಿದ ಪ್ರೀತಿಗೆ ಧನ್ಯವಾದಗಳು. ಈಗ ಹೊಸ ಸಿನಿಮಾದ ಶೀರ್ಷಿಕೆಯನ್ನು ಸೆಪ್ಟೆಂಬರ್ 10ರಂದು ಪ್ರಕಟಿಸುತ್ತೇನೆ. ಜೊತೆಗೆ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಮರುಬಿಡುಗಡೆಯ ದಿನಾಂಕವನ್ನೂ ಶೀಘ್ರದಲ್ಲೇ ತಿಳಿಸುತ್ತೇವೆ."

ಇದರ ಜೊತೆಗೆ ಅವರು ನಿರ್ಮಾಪಕರಾದ ಸಂತೋಷ್ ಸರ್, ವಿದ್ಯಾ ಅಕ್ಕ, ನಿರ್ದೇಶಕ ಕೆ ರಾಮ್ ನಾರಾಯಣ್, ಗಾಡ್‌ಫಾದರ್ ಯೋಗರಾಜ್ ಭಟ್ ಹಾಗೂ ಕರ್ನಾಟಕದ ಜನತೆಗೆ ಕ್ಷಮೆ ಕೇಳಿದ್ದಾರೆ.

ಮೇ 23ರಂದು ಚಿತ್ರ ಬಿಡುಗಡೆಯಾದರೂ, ಅದಕ್ಕೂ ಮುನ್ನವೇ (ಮೇ 22ರಂದು) ಮನು ಬಂಧನಕ್ಕೊಳಗಾದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಮನು ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.