ಕಟೀಲು ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ
ಸ್ಯಾಂಡಲ್ವುಡ್ ನಟ ಶ್ರೀಮುರಳಿ ಅವರು ಅ.8ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಿಯ ದರ್ಶನ ಪಡೆದ ಶ್ರೀಮುರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಧರ್ಮದರ್ಶಿ ವೆಂಕಟರಮಣ ಆಸ್ರಣ್ಣ ಅವರು ಶ್ರೀಮುರಳಿಗೆ ದೇವರ ವಿಶೇಷ ವಸ್ತ್ರವನ್ನು ನೀಡಿ ಗೌರವಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಮುರಳಿ, ನವರಾತ್ರಿ ಶುಭ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಬಾಲ್ಯದ ದಿನಗಳಲ್ಲಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗಿನ ನೆನಪನ್ನು ಹಂಚಿಕೊಂಡ ಅವರು, ಈ ಬಾರಿ ಚಿತ್ರೀಕರಣದ ವಿಚಾರದಲ್ಲಿ ತೊಡಗಿಕೊಂಡಿದ್ದರೂ, ದೇವಸ್ಥಾನಕ್ಕೆ ಬರುವ ಅವಕಾಶ ಸಿಕ್ಕಿದಂತೆ ತಿಳಿಸಿದರು.
ತುಳು ಚಿತ್ರರಂಗ ಬೆಳೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀಮುರಳಿ, ಇದು ಕನ್ನಡ ಚಿತ್ರರಂಗದಂತೆ ಇನ್ನಷ್ಟು ಯಶಸ್ಸು ಕಾಣಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.