Back to Top

"ಸಾಹಸ ಸಿಂಹ ನೆನಪು ಅಳಿಸಬೇಡಿ: ಲಕ್ಷಾಂತರ ಅಭಿಮಾನಿಗಳ ಪರ ಸುದೀಪ್"

SSTV Profile Logo SStv August 11, 2025
ವಿಷ್ಣು ಸ್ಮಾರಕ ಉಳಿಸಲು ಸುದೀಪ್ ವಿನಂತಿ
ವಿಷ್ಣು ಸ್ಮಾರಕ ಉಳಿಸಲು ಸುದೀಪ್ ವಿನಂತಿ

ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ತೆರವುಗೊಳಿಸಿರುವ ಘಟನೆ ಅಭಿಮಾನಿಗಳ ಮನದಲ್ಲಿ ಆಕ್ರೋಶ ಹುಟ್ಟಿಸಿದೆ. ವರ್ಷಗಳಿಂದ ವಿಷ್ಣು ಸ್ಮಾರಕವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದ ಅಭಿಮಾನಿಗಳಿಗೆ ಇದೀಗ ನಟ ಕಿಚ್ಚ ಸುದೀಪ್ ಸಹ ಬೆಂಬಲ ನೀಡಿದ್ದಾರೆ. ರಾತ್ರೋರಾತ್ರಿ ಸ್ಮಾರಕ ತೆರವು ಕಾರ್ಯ ನಡೆದಿದ್ದು, ಅನೇಕ ಅಭಿಮಾನಿಗಳು ನೋವಿನಿಂದ ಕಂಗಾಲಾಗಿದ್ದಾರೆ. ಈ ವಿಷಯವಾಗಿ ಎಕ್ಸ್ ಖಾತೆಯಲ್ಲಿ ಭಾವುಕವಾದ ಉದ್ದವಾದ ಪೋಸ್ಟ್ ಹಾಕಿರುವ ಸುದೀಪ್, "ನಾವು ನಂಬಿಕೆ ಇಟ್ಟಿದ್ದ ದೇವಾಲಯವನ್ನು ಒಡೆದಾಗ ಯಾವ ನೋವು ಆಗುತ್ತದೋ, ಅದೇ ನೋವು ನನಗೂ ಆಗಿದೆ" ಎಂದು ತಿಳಿಸಿದ್ದಾರೆ.

ಸ್ಮಾರಕವನ್ನು ಉಳಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನಗಳಲ್ಲಿ ತಾವು ಹಾಗೂ ಲಕ್ಷಾಂತರ ಅಭಿಮಾನಿಗಳು ಸಿದ್ಧರಿದ್ದಾರೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. "ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು. ಭೂಮಿ ಖರೀದಿ ಮಾಡಿದವರು ಸಮ್ಮತಿಸಿದರೆ, ನಾವು ಬೇಕಾದಷ್ಟು ಹಣಕಾಸು ಒದಗಿಸುತ್ತೇವೆ. ನಾನೇ ಮುಂದೆ ನಿಂತು ಸ್ಮಾರಕವನ್ನು ಮರುಸ್ಥಾಪನೆ ಮಾಡಲು ಸಿದ್ದ" ಎಂದು ಭರವಸೆ ನೀಡಿದ್ದಾರೆ. ವಿಷ್ಣು ಸಮಾಧಿ ಮೈಸೂರಿನಲ್ಲಿರುವುದರಿಂದ ಅದನ್ನೇ ಅಧಿಕೃತ ಸ್ಮಾರಕವಾಗಿ ಪರಿಗಣಿಸುವಂತೆ ಹೈಕೋರ್ಟ್ ಆದೇಶಿಸಿದೆ ಎಂದು ತಿಳಿದುಬಂದಿದೆ. ಆದರೆ, ಬೆಂಗಳೂರಿನಂತಹ ಮಹಾನಗರದಲ್ಲಿ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಒಂದು ಸ್ಥಳವೇ ಇಲ್ಲ ಎಂಬುದು ಅಭಿಮಾನಿಗಳಿಗೆ ಅಸಹ್ಯವಾಗುತ್ತಿದೆ.

ಸುದೀಪ್ ತಮ್ಮ ಪೋಸ್ಟ್‌ನಲ್ಲಿ ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ದೃಷ್ಟಿಯನ್ನು ನೆನಪಿಸಿಕೊಂಡಿದ್ದಾರೆ. "ನಾನು ಪಂಚಭೂತಗಳಲ್ಲಿ ಇರಬೇಕು, ಸ್ಥಾವರಗಳಿಗೆ ಬದ್ಧರಾಗಬಾರದು" ಎಂದು ವಿಷ್ಣು ಹೇಳಿದ್ದಾರೆ ಎಂದು ಸುದೀಪ್ ಬರೆದಿದ್ದಾರೆ. ಆದರೂ, ಅಭಿಮಾನಿಗಳಿಗೆ ಪ್ರಾರ್ಥನೆ, ಗೌರವ ಸಲ್ಲಿಸಲು ಒಂದು ಸ್ಮಾರಕದ ಅವಶ್ಯಕತೆ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.

"ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಭಾವನೆ, ಗೌರವ, ಅಭಿಮಾನವೇ ಮುಖ್ಯ. ಸರ್ಕಾರ, ನ್ಯಾಯಾಲಯ ಹಾಗೂ ಭೂಮಿ ಮಾಲೀಕರು ಒಗ್ಗೂಡಿ ಈ ಸಮಸ್ಯೆಯನ್ನು ಬಗೆಹರಿಸಲಿ. ನಮ್ಮ ಪ್ರೀತಿಗೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ" ಎಂದು ಸುದೀಪ್ ತಮ್ಮ ಮನವಿಯನ್ನು ಮುಕ್ತಾಯಗೊಳಿಸಿದ್ದಾರೆ. ಸಾಹಸ ಸಿಂಹರ ನೆನಪುಗಳು ಕನ್ನಡಿಗರ ಹೃದಯಗಳಲ್ಲಿ ಸದಾ ಜೀವಂತವಾಗಿವೆ. ಆದರೆ, ಆ ನೆನಪುಗಳಿಗೆ ಒಂದು ಭೌತಿಕ ಸಂಕೇತ ಉಳಿಯುವುದೇ ಎಂಬುದು ಈಗ ಎಲ್ಲರ ಪ್ರಶ್ನೆ.