Back to Top

ಅಂಬರೀಶ್ ತೆಗೆದುಕೊಂಡ ನಿರ್ಧಾರವೇ ವಿಷ್ಣುವರ್ಧನ್ ಸಮಾಧಿ ವಿವಾದಕ್ಕೆ ಕಾರಣವೇ?

SSTV Profile Logo SStv August 9, 2025
ಅಭಿಮಾನ ಸ್ಟುಡಿಯೋದಿಂದ ವಿಷ್ಣುವರ್ಧನ್ ಸಮಾಧಿ ತೆರವು
ಅಭಿಮಾನ ಸ್ಟುಡಿಯೋದಿಂದ ವಿಷ್ಣುವರ್ಧನ್ ಸಮಾಧಿ ತೆರವು

ಅಭಿಮಾನಿಗಳನ್ನು ಆಘಾತಕ್ಕೀಡಾಗಿಸುವ ರೀತಿಯಲ್ಲಿ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಹೈಕೋರ್ಟ್‌ ಸೂಚನೆಯ ಮೇರೆಗೆ ನಡೆದ ಈ ಕ್ರಮ ಅಭಿಮಾನಿಗಳಲ್ಲಿ ಆಕ್ರೋಶ ಉಂಟುಮಾಡಿದೆ. ಅವರು ಇದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

2009ರಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಅಭಿಮಾನ್ ಸ್ಟುಡಿಯೋದಲ್ಲೇ ನಡೆಯಿತು. ಅಂದು ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ, ಆ ಸ್ಥಳವನ್ನು ಸ್ಮಾರಕವನ್ನಾಗಿ ರೂಪಿಸಬೇಕು ಎನ್ನುವುದು ಎಲ್ಲರ ಆಶೆಯೂ ಆಗಿತ್ತು. ಅಂಬರೀಶ್ ಅವರ ವೈಯಕ್ತಿಕ ಆಸೆಯೂ ಇದೇ ಆಗಿತ್ತು. ಆದರೆ, ಜಾಗ ವಿವಾದಿತವಾಗಿರುವುದು ಆ ಸಮಯದಲ್ಲಿ ಪರಿಗಣಿಸಲ್ಪಡದೇ, ಮುಂದಿನ ದಿನಗಳಲ್ಲಿ ಇದು ದೊಡ್ಡ ಹಗ್ಗಜಗ್ಗಾಟಕ್ಕೆ ಕಾರಣವಾಯಿತು.

ವಿಷ್ಣು ಕುಟುಂಬಸ್ಥರು ನಂತರ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ನಿರ್ಧರಿಸಿದರೂ, ಅಂಬಿ ಮನಸ್ಸಿನಲ್ಲಿ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಕಟ್ಟಬೇಕೆಂಬ ಕನಸು ಉಳಿಯಿತು. ಆದರೆ ಕಾನೂನು ತಕರಾರು ಮತ್ತು ಬಾಲಣ್ಣ ಕುಟುಂಬದ ಆಸ್ತಿ ವಿವಾದಗಳ ನಡುವಲ್ಲಿ, ಆ ಕನಸು ನನಸಾಗಲಿಲ್ಲ.

ಈ ಘಟನೆಯ ಬಗ್ಗೆ ನಟ ಬಾಲಕೃಷ್ಣ ಪುತ್ರಿ ಗೀತಾ ಬಾಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹಂಚಿಕೊಂಡ ಮಾಹಿತಿಯ ಪ್ರಕಾರ, ಸಮಾಧಿ ಜಾಗ ನಿಗದಿ ಮಾಡುವಲ್ಲಿ ಅಂಬರೀಶ್ ಪ್ರಮುಖ ಪಾತ್ರ ವಹಿಸಿದ್ದರು. ಬಾಲಣ್ಣ ಪುತ್ರ ಗಣೇಶ್ ಅವರಿಗೂ ಅಂತ್ಯಕ್ರಿಯೆಯ ನಿರ್ಧಾರ ದಿಢೀರ್ ಆಗಿ ತಿಳಿದು, ಪ್ರತಿರೋಧ ತೋರದೆ ಅಂಬಿಯ ಮಾತಿಗೆ ಒಪ್ಪಿಕೊಂಡಿದ್ದರು.

ಇಂದು ಆ ಸ್ಥಳದಲ್ಲಿ ವಿಷ್ಣುವರ್ಧನ್ ಸಮಾಧಿಯ ಯಾವುದೇ ಗುರುತು ಉಳಿದಿಲ್ಲ. ಆದರೆ ಅಭಿಮಾನಿಗಳ ಹೃದಯದಲ್ಲಿ, ತಮ್ಮ ಪ್ರಿಯ ನಟನ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲೇ ನೋಡುವ ಕನಸು ಇನ್ನೂ ಜೀವಂತವಾಗಿದೆ.