'ರುದ್ರಾಭಿಷೇಕಂ' ಚಿತ್ರಕ್ಕೆ ಜು.20 ರಿಂದ ರೀರೆಕಾರ್ಡಿಂಗ್


ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ವೀರಗಾಸೆ ಕಲೆ ಹಾಗೂ ವೀರಭದ್ರ ದೇವರ ಇತಿಹಾಸ ಹೇಳುವ ಚಿತ್ರ ರುದ್ರಾಭಿಷೇಕಂ. ಈಗಾಗಲೇ ಶೂಟಿಂಗ್ ಸಮಯದಲ್ಲಿ ನೂರಾರು ವೀರಗಾಸೆ ಕಲಾವಿದರನ್ನು ಕರೆಸಿ ದಾಖಲೆ ನಾಡಿದ್ದ ಚಿತ್ರತಂಡ ಇದೀಗ ಶೂಟಿಂಗ್ ನಂತರ ಡಬ್ಬಿಂಗ್ ಕೆಲಸವನ್ನೂ ಸಹ ಮುಗಿಸಿದೆ. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ಮೊದಲಬಾರಿಗೆ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಬೆಡಗಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕರ ಹಾಗೂ ಕಲಾವಿದರೆಲ್ಲರ ಸಹಕಾರದಿಂದ ಯಾವುದೇ ತೊಂದರೆಯಿಲ್ಲದೆ ಅಂದುಕೊಂಡ ಹಾಗೆ ನಮ್ಮ ಚಿತ್ರ ಮೂಡಿಬರುತ್ತಿದೆ, ಈಗಾಗಲೇ ಮಾತುಗಳ ಮರುಜೋಡಣೆ ಕಾರ್ಯ ಸಹ ಮುಗಿದಿದ್ದು, ಜು. 20 ರಿಂದ ಚಿತ್ರದ ರೀರೆಕಾರ್ಡಿಂಗ್ ಕೆಲಸ ಪ್ರಾರಂಭಿಸುತ್ತಿರುವುದಾಗಿ ನಿರ್ದೇಶಕ ವಸಂತ್ ಕುಮಾರ್ ಅವರು ತಿಳಿಸಿದ್ದಾರೆ.
ವೀರಗಾಸೆ ಕುಟುಂಬವೊಂದರ ಹಿನ್ನೆಲೆಯಲ್ಲಿ ಆ ಕಲೆಯ ಮೂಲ, ಅದರ ಇತಿಹಾಸವನ್ನು ಈ ಚಿತ್ರದಲ್ಲಿ ನಿರ್ದೇಶಕರು ಹೇಳಲು ಪ್ರಯತ್ನಿಸಿದ್ದಾರೆ. ಚಿಕ್ಕಬಳ್ಳಾಪುರದ ಸುತ್ತಮುತ್ತಲ ಗ್ರಾಮಗಳಲ್ಲಿ ಅಲ್ಲದೆ ಮಲೆನಾಡಿನ ಸುಂದರ ಲೊಕೇಶನ್ ಗಳಲ್ಲಿ 'ರುದ್ರಾಭಿಷೇಕಂ' ಫ್ಯಾನ್ ಇಂಡಿಯಾ ಸಂಸ್ಥೆಯ ಮೊದಲ ಚಿತ್ರವಾಗಿದ್ದು, ನಿರ್ದೇಶಕ ವಸಂತಕುಮಾರ್ ಜತೆಗೆ ಮಂಜುನಾಥ ಕೆ.ಎನ್, ಎನ್.ಜಯರಾಮ್, ಕೆ.ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್ ಸೇರಿದಂತೆ 9 ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ಸಾರೆ. ದೈವದ ಹಿನ್ನೆಲೆ ಇರುವ ಜನಪದ ಕಲೆಯನ್ನು ನಾಡಿನ ಮನೆ ಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ. ನಾಯಕ ವಿಜಯ ರಾಘವೇಂದ್ರ ಕೂಡ ನಮಗೆ ತುಂಬಾ ಸಹಕಾರ ಕೊಟ್ಟಿದ್ದಾರೆ. ತಂಡದ ಜತೆ ಸ್ನೇಹಿತನಂತೆ ಬೆರೆತು ಕೈಜೋಡಿಸಿದ್ದಾರೆ. ಚಿತ್ರದಲ್ಲಿ ನಾನೂ ಒಬ್ಬ ತತ್ವಜ್ಞಾನಿಯಾಗಿ ನಟಿಸಿದ್ದೇನೆ. ತಂದೆ, ಮಗ ಎರಡೂ ಪಾತ್ರಗಳ ಜತೆ ಇಡೀ ಚಿತ್ರದಲ್ಲಿ ಬರುವ ನನ್ನ ಪಾತ್ರಕ್ಕೆ ಎರಡು ಗೆಟಪ್ ಇದೆ ಎಂದೂ ವಸಂತಕುಮಾರ್ ಹೇಳಿದರು. ವೀರಗಾಸೆ ಕಲಾವಿದ ಅಲ್ಲದೆ, ಇದೇ ಮೊದಲ ಬಾರಿಗೆ ತಂದೆ, ಮಗನಾಗಿ, ದ್ವಿಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯ ಮಹತ್ವ, ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಹಿರಿಯನಟ ಬಲ ರಾಜವಾಡಿ ಊರ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ವಿ. ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
