Back to Top

ದರ್ಶನ್ ಜಾಮೀನಿನ ಬಗ್ಗೆ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ತೀವ್ರ ಅಸಮಾಧಾನ – ದರ್ಶನ್ ಪರ ವಕೀಲರಿಗೆ ಸುಪ್ರೀಂನ ಕಠಿಣ ಪ್ರಶ್ನೆ

SSTV Profile Logo SStv July 24, 2025
ದರ್ಶನ್ ಪರ ವಕೀಲರಿಗೆ ಸುಪ್ರೀಂನ ಕಠಿಣ ಪ್ರಶ್ನೆ
ದರ್ಶನ್ ಪರ ವಕೀಲರಿಗೆ ಸುಪ್ರೀಂನ ಕಠಿಣ ಪ್ರಶ್ನೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಸೇರಿದಂತೆ 17 ಮಂದಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಮೇಲ್ಮನವಿ ಆಧಾರಿತ ಈ ವಿಚಾರಣೆಯಲ್ಲಿ ಸುಪ್ರೀಂ, ಹೈಕೋರ್ಟ್‌ನ ವಿವೇಚನೆಯ ಕೊರತೆ ಮತ್ತು ಪುರಾವೆಗಳನ್ನು ಪುರಸ್ಕರಿಸದ ಕ್ರಮವನ್ನು ಗಂಭೀರವಾಗಿ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ನೇತೃತ್ವದ ಪೀಠ, ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಪರ ವಕೀಲರ ವಾದವನ್ನು ಆಲಿಸಿಕೊಂಡು, “ಹೈಕೋರ್ಟ್ ಈ ರೀತಿಯ ಜಾಮೀನು ಆದೇಶ ನೀಡುವುದು ಸರಿಯೇ? ಪುರಾವೆಗಳನ್ನು ಪರಿಗಣಿಸದೆ ತೀರ್ಮಾನ ನೀಡಿರುವುದೇ ನ್ಯಾಯಾಂಗೀಯ ಪ್ರಕ್ರಿಯೆ?” ಎಂಬ ಪ್ರಶ್ನೆಗಳನ್ನು ಎತ್ತಿದೆ.

ಹೈಕೋರ್ಟ್ ನೀಡಿರುವ ತೀರ್ಪು ಸಾಮಾನ್ಯ ಜಾಮೀನು ಅರ್ಜಿಗಳ ರೀತಿಯಲ್ಲಿ ತಯಾರಿಸಲಾಗಿದ್ದು, ವಿಶಿಷ್ಟ ಪ್ರಕರಣವನ್ನಾಗಿ ಪರಿಗಣಿಸದೇ ನೇರವಾಗಿ ಆರೋಪಿಗಳಿಗೆ ಅನುಕೂಲವಾಗುವ ರೀತಿ ತೀರ್ಪು ನೀಡಲಾಗಿದೆ ಎಂಬುದು ಸುಪ್ರೀಂ ಕೋರ್ಟ್‌ ಆಕ್ಷೇಪ.

“ಘಟನೆ ನಡೆದಿರುವುದೇ ಸುಳ್ಳು ಎನ್ನುವುದು ಹೇಗೆ ಸಾಧ್ಯ? ಟೆಸ್ಟ್ ರಿಪೋರ್ಟ್‌ಗಳ ಕುರಿತು ಪರಿಗಣಿಸಲೇಬಾರದೇ?” ಎಂದು ಕೋರ್ಟ್ ದರ್ಶನ್ ಪರ ವಕೀಲರಿಗೆ ತೀವ್ರವಾಗಿ ಪ್ರಶ್ನೆ ಮಾಡಿದೆ. "ಟ್ರಯಲ್ ಕೋರ್ಟ್ ತಪ್ಪು ಮಾಡಬಹುದು, ಆದರೆ ಹೈಕೋರ್ಟ್ ನೀಡಿರುವ ನ್ಯಾಯಭರಿತ ಕಾರಣಗಳನ್ನು ಒಪ್ಪುವುದು ಕಷ್ಟ" ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಎಲ್ಲ ವಿಚಾರಣೆ ನಂತರ, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು 10 ದಿನಗಳ ಬಳಿಕ ಪ್ರಕಟಿಸುವುದಾಗಿ ಘೋಷಿಸಿದ್ದು, ಇದರಿಂದ ದರ್ಶನ್ ಸೇರಿದಂತೆ ಇತರ ಆರೋಪಿಗಳ ಜಾಮೀನು ಭವಿಷ್ಯ ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ನಡುವೆ, ಕೋರ್ಟ್ ನೀಡಿದ ಅಭಿಪ್ರಾಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.