Back to Top

ಆಗಸ್ಟ್ 1 ಕ್ಕೆ ” ಎಲ್ಟು ಮುತ್ತಾ”ಬೆಳ್ಳಿಯ ತೆರೆಗೆ; ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರಿಂದ "ಎಲ್ಟು ಮುತ್ತಾ'' ಚಿತ್ರದ ಟ್ರೇಲರ್ ಅನಾವರಣ

SSTV Profile Logo SStv July 17, 2025
ಆಗಸ್ಟ್ 1 ಕ್ಕೆ ” ಎಲ್ಟು ಮುತ್ತಾ”ಬೆಳ್ಳಿಯ ತೆರೆಗೆ
ಆಗಸ್ಟ್ 1 ಕ್ಕೆ ” ಎಲ್ಟು ಮುತ್ತಾ”ಬೆಳ್ಳಿಯ ತೆರೆಗೆ

HIGH 5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್ ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ ಹಾಗೂ ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ ‘ಎಲ್ಟು ಮುತ್ತಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಅವರು ಟ್ರೇಲರ್ ಬಿಡುಗಡೆ ಮಾಡಿದರು. ನಟರಾದ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್ , , ಜಿ.ಬಿ.ವಿನಯ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿ ರಾಜೇಶ್ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಚಿತ್ರಕ್ಕೆ ಶುಭ ಕೋರಿದರು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ನಿರ್ಮಾಪಕ ಸತ್ಯ ಶ್ರೀನಿವಾಸನ್, ನಮ್ಮ ಚಿತ್ರದ ಎರಡು ಹಾಡುಗಳು ಹಾಗೂ ಟೀಸರ್ ಗೆ ದೊರಕಿರುವ ಪ್ರಶಂಸೆಗೆ ಬಹಳ ಖುಷಿಯಾಗಿದೆ. ಅದರಲ್ಲೂ ಕೊಡವ ಭಾಷೆಯ ಹಾಡಂತೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇಂದು ಗಣ್ಯರಿಂದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಪ್ರಚಾರಕ್ಕಾಗಿ "ಎಲ್ಟು ಮುತ್ತಾ" ನ ಸಂಚಾರ ಆರಂಭವಾಗಿದ್ದು, ರಾಜ್ಯದ ವಿವಿಧ ಊರುಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ.  ಆಗಸ್ಟ್ 1 ರಂದು “ಎಲ್ಟು ಮುತ್ತಾ “ನಮ್ಮ ಚಿತ್ರ ಶ್ರೀಧರ್ ಕೃಪ ಎಂಟರ್ ಪ್ರೈಸಸ್ ಮೂಲಕ ರಾಜ್ಯದಂತ ಬಿಡುಗಡೆಯಾಗುತ್ತಿದೆ ಎಂದರು.

ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ನಮ್ಮ ಚಿತ್ರ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಈಗಾಗಲೇ ತಿಳಿಸಿದ ಹಾಗೆ "ಎಲ್ಟು ಮುತ್ತಾ" ಎರಡು ಪಾತ್ರಗಳ ಹೆಸರು. ಇದು ಸಾವಿಗೆ ಡೋಲು ಬಡೆಯುವವರ ಸುತ್ತ ಹೆಣೆದಿರುವ ಕಥೆ. ಕೊಡಗು ಪ್ರಾಂತ್ಯದಲ್ಲಿ ನಡೆಯುವ ಕಥೆಯೂ ಹೌದು. ಚಿಕ್ಕವಯಸ್ಸಿನಿಂದ ನಾನು ಕಂಡ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತರುತ್ತಿದ್ದೇನೆ. ನಿಮಗೂ ಚಿತ್ರ ಹಿಡಸಲಿದೆ ಎಂಬ ಭರವಸೆ ಇದೆ. ನಾನು ನಿರ್ದೇಶನದ ಜೊತೆಗೆ ಎಲ್ಟು ಪಾತ್ರದಲ್ಲೂ ಅಭಿನಯಿಸಿದ್ದೇನೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ನಟಿಸಿದ್ದಾರೆ ಎಂದು ನಿರ್ದೇಶಕ ರಾ ಸೂರ್ಯ ತಿಳಿಸಿದರು.

ನಾನು ಮುತ್ತಾ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಬರವಣಿಗೆ ಹಂತದಿಂದಲೂ ಚಿತ್ರತಂಡದ ಜೊತೆಗಿದ್ದೇನೆ.  ಇದು ನನ್ನ ಮೊದಲ ಚಿತ್ರ. ನಮ್ಮ ಚಿತ್ರದ ಟೀಸರ್, ಹಾಡುಗಳು ಹಾಗೂ ಇಂದು ಬಿಡುಗಡೆಯಾಗಿರುವ ಟ್ರೇಲರ್ ಗೆ ಸಿಗುತ್ತಿರುವ ಪ್ರಶಂಸೆ ನೋಡಿದರೆ ಚಿತ್ರ ಗೆದ್ದೆ ಗೆಲ್ಲುವ ನಿರೀಕ್ಷೆ ಇದೆ ಎಂದರು ನಾಯಕ ಶೌರ್ಯ ಪ್ರತಾಪ್. ರುಹಾನ್ ಆರ್ಯ ಒಬ್ಬ ಉದಯೋನ್ಮುಖ ನಟ ಇವರು ನಟನೆಯ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿ ಕೂಡ ಕೆಲಸ ಮಾಡಿದ್ದಾರೆ.

ಹಾಡುಗಳು ಹಿಟ್ ಆಗಿರುವುದಕ್ಕೆ ಸಂಗೀತ ನಿರ್ದೇಶಕ ಮತ್ತು ಗಾಯಕ “ಪ್ರಸನ್ನ ಕೇಶವ”ಸಂತಸಪಟ್ಟರು. ನಾಯಕಿ ಪ್ರಿಯಾಂಕ ಮಳಲಿ ಹಾಗೂ ನಟ ಕಾಕ್ರೋಜ್ ಸುಧೀ , ನವೀನ್ ಡಿ ಪಡೀಲ್ ಮತ್ತು ಯಮುನಾ ಶ್ರೀನಿಧಿ ಯಂತ ಅನುಭಾವಿ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಹ ನಿರ್ಮಾಪಕ ಪವೀಂದ್ರ ಪೊನ್ನಪ್ಪ,ಹಾಗೂ ವಿತರಕ ಶ್ರೀಧರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.